ಭಾರತದ ಮೂಲಧರ್ಮವಾದ ಬೌದ್ಧಧರ್ಮವು ವೈದಿಕಶಾಹಿಯ ಕುತಂತ್ರದ ಫಲವಾಗಿ ಈ ನೆಲದಿಂದ ವಿಸ್ಮøತಿಗೆ ಗುರಿಯಾಗಿದೆ. ಬೌದ್ಧಧರ್ಮದ ಜೀವಪರ ಮತ್ತು ವೈಚಾರಿಕ ಚಿಂತನೆಗಳಿಂದ ತನ್ನ ಅಸ್ತಿತ್ವಕ್ಕೆ ಧಕ್ಕೆ ಎಂಬುದನ್ನು ಅರಿತ ಆರ್ಯನ್ನರು, ವಿಷ್ಣುವಿನ ದಶಾವತಾರ ಕಲ್ಪನೆಯಲ್ಲಿ ಬುದ್ಧನನ್ನು ಒಂದು ಭಾಗವಾಗಿ ಕಲ್ಪಿಸಿಕೊಂಡು ಕಲ್ಪಿತ ಪುರಾಣಗಳನ್ನು ಸೃಷ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಬುದ್ಧ ಗುರುವಿನ ಜೀವಪರ ಆಶಯಗಳಿಗೆ ತಿಲಾಂಜಲಿ ಇಟ್ಟು ಅಸಮಾನತೆ, ಅಸ್ಪøಶ್ಯತೆಗಳನ್ನು ಎತ್ತಿಹಿಡಿಯಲಾಗಿದೆ.
ಇದರ ಅಡಿಯಲ್ಲಿ ಸಾವಿರಾರು ವರ್ಷಗಳಿಂದಲೂ ದಮನಿತ ಹಾಗೂ ಹಿಂದುಳಿದ ಸಮುದಾಯಗಳನ್ನು ಧರ್ಮ ಮತ್ತು ದೇವರ ಹೆಸರಿನಲ್ಲಿ ಶೋಷಣೆಗೆ ಒಳಪಡಿಸಲಾಗಿದೆ.
ಬೌದ್ಧಧರ್ಮವು ಭಾರತದಿಂದ ವಿಸ್ಮøತಿಗೆ ಸಂದರೂ ತನ್ನ ವೈಚಾರಿಕತೆಯ ಗಟ್ಟಿತನದಿಂದ ಜಗತ್ತಿನ ಎರಡನೇ ದೊಡ್ಡ ಧರ್ಮವಾಗಿ ತನ್ನ ಅನನ್ಯತೆಯನ್ನು ಕಾಯ್ದುಕೊಂಡಿದೆ. ವಿಶ್ವದ ಎಲ್ಲಾ ದಾರ್ಶನಿಕರು ಬುದ್ಧ ಗುರುವಿನ ತತ್ವ-ಚಿಂತನೆಗಳಿಗೆ ಶರಣಾಗಿದ್ದಾರೆ. ಆ ಮೂಲಕ ಬುದ್ಧನ ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನಧಾರೆಗಳನ್ನು ಎತ್ತಿಹಿಡಿದಿದ್ದಾರೆ. ಹೀಗಾಗಿ ಆಧುನಿಕ ಭಾರತದ ನಿರ್ಮಾತೃ ಹಾಗೂ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರು 1930ರ ಸುಮಾರಿನಲ್ಲಿ ‘ನಾನು ಹಿಂದೂವಾಗಿ ಹುಟ್ಟಿದ್ದೇನೆ, ಆದರೆ ಹಿಂದೂವಾಗಿ ಸಾಯಲಾರೆ’ ಎಂಬುದಾಗಿ ಘೋಷಿಸಿ, 1956 ಅಕ್ಟೋಬರ್ 14 ರಂದು ತಮ್ಮ ಅಸಂಖ್ಯಾತ ಅನುಯಾಯಿಗಳೊಂದಿಗೆ ಬೌದ್ಧಧಮ್ಮ ಸ್ವೀಕಾರ ಮಾಡುವ ಮೂಲಕ ತಮ್ಮ ಮೂಲಧಮ್ಮವನ್ನು ಎತ್ತಿಹಿಡಿದಿದ್ದಾರೆ. ಯಾವ ಹಿಂದೂಧರ್ಮವು ಅಸಮಾನತೆಯ ಕೂಪವನ್ನು ಸೃಷ್ಟಿಸಿ, ಸಾಮಾಜಿಕ, ಧಾರ್ಮಿಕ, ರಾಜಕೀಯ ಅಸಮಾನತೆಯನ್ನು ಸೃಷ್ಟಿ ಮಾಡಿಕೊಂಡು ಬಂದಿರುತ್ತದೆಯೋ, ಅದಕ್ಕೆ ಪರ್ಯಾಯವಾಗಿ ಬೌದ್ಧಧಮ್ಮವನ್ನು ಕಂಡುಕೊಂಡು, ದಮನಿತ ವರ್ಗಗಳ ಸ್ವಾಭಿಮಾನದ ಬದುಕಿಗೆ ಮುನ್ನುಡಿ ಬರೆದಿದ್ದಾರೆ.
ಹೀಗಾಗಿ ಬುದ್ಧಗುರುವಿನ ತತ್ವ, ಚಿಂತನೆ, ದರ್ಶನವನ್ನು ಭಾರತದ ಮೂಲನಿವಾಸಿಗಳಿಗೆ ಪರಿಚಯಿಸುವ ಮತ್ತು ಪ್ರಸಾರ ಮಾಡುವ ಆಶಯದಿಂದಾಗಿ ‘ಬೋಧಿಸತ್ವ ಬುದ್ಧ ಫೌಂಡೇಶನ್’ ಸ್ಥಾಪನೆಗೆ ಮುಂದಾಗಲಾಗಿದೆ. ವಿಶೇಷವಾಗಿ ಕೋಮುವಾದದ ಮೂಲ ನೆಲೆಸಿರುವುದೇ ಕರ್ನಾಟಕದ ಕರಾವಳಿ ಪ್ರಾಂತ್ಯದಲ್ಲಿ. ಇಲ್ಲಿಂದ ಆರಂಭವಾಗುವ ಕೋಮುಜ್ವಾಲೆಯು ಭಾರತದಾದ್ಯಂತ ಪಸರಿಸಿ, ಜನಸಾಮಾನ್ಯರ ಬದುಕಿನ ನೆಮ್ಮದಿ, ಶಾಂತಿ, ಸೌಹಾರ್ದತೆ, ಸಹಬಾಳ್ವೆ, ಸಹಕಾರಗಳಿಗೆ ಧಕ್ಕೆ ಉಂಟು ಮಾಡುತ್ತಿದೆ. ಈ ಕಾರಣದಿಂದಾಗಿ ವಿಶ್ವಕ್ಕೆ ಶಾಂತಿಯ ಪಾಠ ಹೇಳಿಕೊಟ್ಟ ಬುದ್ಧ ಗುರುವಿನ ತತ್ವ-ಚಿಂತನೆಗಳ ಮೂಲಕವೇ ಕೋಮುದ್ವೇಷವನ್ನು ಅಳಿಸುವ ಆಶಯದಿಂದಾಗಿ ‘ಬೋಧಿಸತ್ವ ಬುದ್ಧ ಫೌಂಡೇಶನ್’ ಆರಂಭಿಸಲಾಗಿದೆ.
ಬೋಧಿಸತ್ವ ಬುದ್ಧ ಫೌಂಡೇಶನ್ ಅಡಿಯಲ್ಲಿ ಈಗಾಗಲೇ ಬೌದ್ಧಧಮ್ಮ ಕೇಂದ್ರಿತವಾದ ಹಲವಾರು ತರಬೇತಿ, ಕಾರ್ಯಗಾರ, ಪ್ರಾರ್ಥನೆ, ಉಪನ್ಯಾಸ ಮುಂತಾದ ಕಾರ್ಯಕ್ರಮಗಳನ್ನು ಏರ್ಪಡಿಸಿಕೊಂಡು ಬರಲಾಗಿದೆ. ಮುಂದಿನ ದಿನಗಳಲ್ಲಿ ನಾವು ಬೌದ್ಧಧಮ್ಮವನ್ನು ಮನೆ-ಮನಗಳಿಗೆ ತಲುಪಿಸುವ ಯೋಜನೆಯನ್ನು ಕೈಗೊಂಡಿದ್ದು, ನಾಡಿನಾದ್ಯಂತ ಬುದ್ಧ ಗುರುವಿನ ಜೀವಪರ ಆಶಯಗಳನ್ನು ಪ್ರಸಾರ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆ.